ಪ್ರಶ್ನೆಗಳು



ಹೆಸರು ಗೊತ್ತಿಲ್ಲದ ನದಿ, ವಿಶಾಲವಾಗಿ ಹರಿಯುತ್ತಿದೆ. ಮನುಜರ ಪಾಪಗಳನ್ನು ತನ್ನ ಪುಣ್ಯ ಅಂಬುಧಿಯಲ್ಲಿ ತೊಳೆಯುತ್ತಾ, ಅಸಂಖ್ಯ ಜೀವಿಗಳಿಗೆ ಆವಾಸವಾಗಿ, ಬೆಟ್ಟ- ಬಂಡೆಗಳಲ್ಲಿ ಛೇದಿಸಿ, ನುಸುಳಿ ಸಾಗುತ್ತಿರುವ ಜನರ ಜೀವನಾಡಿ, ತಾಯಿ. ಬಹುಶಃ ನದಿಯನ್ನು ಮತ್ತು ಭೂಮಿಯನ್ನು ನಾವು ತಾಯಿಯೆನ್ನುವುದು ಪ್ರತಿಫಲಾಪೇಕ್ಷೆಯಿಲ್ಲದೆ ತನ್ನದೆಲ್ಲವನ್ನೂ ನಿಸ್ಪೃಹವಾಗಿ ಕೊಡುವ, ಪ್ರೀತಿಸುವ ಗುಣದಿಂದಲೇ ಇರಬಹುದು. ಪ್ರೀತಿ - ಲೋಕದ ಎಂತಹ ಸುಂದರ ಸೃಷ್ಠಿಯಲ್ಲವೇ? ನಾನು ಪ್ರೀತಿಯನ್ನು, ಪ್ರೇಮವನ್ನು ಅಥವಾ ಪ್ರಣಯವನ್ನು ಅರ್ಥ ಮಾಡಿಕೊಂಡಿದ್ದು ಮತ್ತು ಅನುಭವಿಸಿದ್ದು ಒಂದು ಕೌತುಕದ ಕಥೆಯೇ ಸರಿ.

ಬೆಂಕಿಯಿಂದ ಹುಟ್ಟಿಬಂದ ನಾನು, ಲೋಕ ಸುಂದರಿ ಎಂದೇ ನನ್ನಪ್ಪ-ಅಮ್ಮ ಹೇಳುವುದುಂಟು. ದ್ರುಪದನ ಮಗಳಾಗಿ, ಪಾಂಚಾಲದ ರಾಜಕುಮಾರಿಯಾಗಿ ಅತ್ಯುತ್ತಮ ಶಿಕ್ಷಣ, ಸಂಸ್ಕಾರಗಳು ನನಗೆ ದೊರಕಿದವು. ಚಿಕ್ಕಂದಿನಿಂದಲೇ ನಾನು ಹಠವಾದಿಯಾಗಿದ್ದೆ. ವೀರನೂ, ಬಲಶಾಲಿಯೂ ಆದ ಅಣ್ಣ ದೃಷ್ಟದ್ಯುಮ್ನನನ್ನು ಮೀರಿಸಲು ಅರ್ಥಶಾಸ್ತ್ರವನ್ನು ಮತ್ತು ರಾಜ್ಯಶಾಸ್ತ್ರವನ್ನು ಅಭ್ಯಾಸ ಮಾಡಿದೆ. ಆಗ ಓದಿದ್ದು, ಉಪಯೋಗವಾಗಿದ್ದು  ಖಾಂಡವಪ್ರಸ್ಥದಲ್ಲಿ. ಯುಧಿಷ್ಠಿರನ ಪಟ್ಟ ಮಹಿಷಿಯಾಗಿ, ರಾಜ್ಯದ ಜವಾಬ್ದಾರಿಯನ್ನು ಅವನ ಹೆಗಲಿಗೆ ಹೆಗಲಾಗಿ ನಿರ್ವಹಿಸಲು ಆ ಜ್ಞಾನವೇ
ಕಾರಣ. ರಾಜಕುಮಾರಿಯಾಗಿ ನಾಟ್ಯ- ಸಂಗೀತಗಳಿಗೆ ಮೀಸಲಾಗದೆ, ಛಲಕ್ಕಾಗಿ ಕಲಿತ ವಿದ್ಯೆ ನನ್ನ ವ್ಯಕ್ತಿತ್ವ ರೂಪಿಸಿತು. 

ಎಷ್ಟೊಂದು ಸೋಜಿಗವಲ್ಲವೇ ಜೀವನ? ಪಾಂಚಾಲದಲ್ಲಿ ಅಂದು ಬೆಳೆದು, ಓದಿ ಓಡಿ, ಆಡುವಾಗ, ಅಷ್ಟೇಕೆ, ಸ್ವಯಂವರದ ಮಂಟಪದಲ್ಲಿ ನಿಂತಾಗಲೂ ಬದುಕು ಒಂದು ದಿನ ಈ ತಿರುವಿನಲ್ಲಿ ಬಂದು ನಿಲ್ಲುತ್ತದೆ ಎಂಬ ಕಲ್ಪನೆಯಿತ್ತೇ ನನಗೆ? ಅರಮನೆಯ ಕನ್ನಡಿಯಿದ್ದಿದ್ದರೆ ಈಗ ಅರಳಿದ ನನ್ನ ಗುಳಿಕೆನ್ನೆಯ ಮಂದಹಾಸವನ್ನು ಕಂಡು ಚೂರು ಗರ್ವ ಪಡಬಹುದಿತ್ತು.

ಕನ್ನಡಿ ಎಂಬಂತೆ ನೆನಪಾಯ್ತು, ತುಂಬು ಪ್ರೀತಿಯ ತುಂಬಿಕೊಂಡ ಭೀಮನ ಕಣ್ಣಾಲಿಗಳು. ಅವನ ಆ ಕಂಗಳಲ್ಲಿ ನನ್ನನ್ನು ನೋಡಿಕೊಳ್ಳುವ ಸಂತಸವಿದೆಯಲ್ಲ, ಬೆಟ್ಟದಷ್ಟು ಪ್ರೀತಿಸುವ ಪತಿಯ ಪಡೆದ ಪತ್ನಿಯೇ ಅರ್ಥ ಮಾಡಿಕೊಳ್ಳಬಲ್ಲಳು. ನೋಡುಗರ ಎದೆಯಲ್ಲಿ ಭಯ ಹುಟ್ಟಿಸುವ ದೈತ್ಯಾಕಾರನಾದರೂ ನನ್ನ ನೆರಳು ಸುಳಿಯುತ್ತಲೇ, ಮಾವುತನ ಪ್ರೀತಿಸುವ ಆನೆಯಂತೆ ಮುದ್ದು - ಮುದ್ದಾಗುವ ಭೀಮನವನು. ಇವತ್ತು, ಆಸೆಕಂಗಳಿಂದ ಆ ಸುಂದರ ಹೂ ಬೇಕೆಂದಾಗ ಮಗುವಂತೆ ಜಿಗಿ- ಜಿಗಿದು ಓಡಿಹೋಗಲಿಲ್ಲವೇ ಅವನು, ನನ್ನಾಸೆಯೇ ಅವನ ಜೀವಿತವೆಂಬಂತೆ ? 

ಎಷ್ಟೊಂದು ಮನೋಹರವಾಗಿತ್ತು ಆ ಹೂವು? ಎಂತಹ ಸುವಾಸನೆ? ಎಂತಹ ಬಣ್ಣಗಳು! ಈ
ವನವಾಸವೂ ತಾಪತ್ರಯಗಳೂ ಇಲ್ಲದಿದ್ದರೆ ಹೀಗೆ ಪ್ರಕೃತಿಯಲ್ಲಿ ಸ್ವಚ್ಛಂದವಾಗಿ ವಿಹರಿಸಲು ಸಾಧ್ಯವಿತ್ತೇ? ಅಂತಃಪುರದ ವಾಸವೆಂದರೆ ಬಂಗಾರದ ಪಂಜರವೇ ಸರಿ. ಇರುವಷ್ಟು ದಿನ ಈ ನಿಷ್ಕಲ್ಮಶ ಗಾಳಿ- ನೀರು ಕುಡಿದು ನಿಸರ್ಗದ ಮಡಿಲಲ್ಲಿ ಆನಂದಪಡಬೇಕು. ಆ ಆನಂದವನ್ನು,ಅದರ ಹಾಯಿಯನ್ನು ಮನಸಲ್ಲಿ ತುಂಬಿಕೊಂಡು ಹೋಗಬೇಕು. ಮರಳಿ ಹೋದಮೇಲೆ ಜಗದ ಜಂಜಡದಲ್ಲಿ ದಣಿವಾದಾಗ ಕಣ್ಮುಚ್ಚಿ ಈ ದಿನಗಳನ್ನು ನೆನೆಯಬೇಕು. ಈ ಹಸಿರ ನೆನಪಿಂದ ಉಸಿರಪಡೆಯಬೇಕು, ಚೈತನ್ಯ ತಂದುಕೊಳ್ಳಬೇಕು. 

ನಾನು ಹೀಗೆಯೇ, ತಾಸುಗಟ್ಟಲೆ ಆಲೋಚಿಸಬಲ್ಲೆ. ಆ ಆಲೋಚನೆಗಳಲ್ಲಿ ಕಳೆದುಹೋಗಬಲ್ಲೆ. ಭೀಮನು ಹೋಗಿ ಅದೆಷ್ಟು ಹೊತ್ತಾಯಿತು? ಎಷ್ಟೊಂದು ಪ್ರೇಮ ಅವನಿಗೆ ನನ್ನ ಮೇಲೆ? ಅದೃಷ್ಟವಂತೆ ನಾನು. 

ಅದೃಷ್ಟ ನನ್ನ ಪಾಲಿಗೆ ಐವರಾಗಿ ಮಡಿಲ ತುಂಬಿದೆ. ಯುಧಿಷ್ಠಿರನೋ ಮೃದುಭಾಷಿ, ಸಹೃದಯಿ. ಭೀಮನದೋ ಹುಚ್ಚು ಪ್ರೀತಿ. ಅರ್ಜುನನೋ ವೀರ, ಚಿತ್ತಾಕರ್ಷಕ. ನಕುಲನು ಪರಮಸುಂದರನಾದರೆ ಸಹದೇವನು ಮಹಾಜ್ಞಾನಿ. ಐವರೂ ಪ್ರೀತಿಯನ್ನು ವ್ಯಕ್ತಪಡಿಸುವ ಬಗೆ ಬೇರೆ. ಅಣ್ಣ ತಮ್ಮಂದಿರಾದರೂ ಪಂಚಭೂತಗಳ ಹಾಗೆ ಒಬ್ಬೊಬ್ಬರ ಸ್ವಭಾವವೂ ಒಂದೊಂದು ರೀತಿ. ಯಾರಾದರೂ ಈ ಐವರಲ್ಲಿ ಒಬರನ್ನು ಆರಿಸು ಎಂದರೆ ಸಾಧ್ಯವಾಗಲಾರದೇನೋ. 

ಮದುವೆಯ ಮುಂಚೆ ಯಾರು ಹಿತವರೆಂಬ ಪ್ರಶ್ನೆಗೆ ಉತ್ತರವಿತ್ತು ನನ್ನ ಬಳಿ. ಯವ್ವನದ ಹೊಸಿಲು ತುಳಿದಾಗಿಂದ ಪಾರ್ಥನ ಸಾಹಸಗಳ ಬಗ್ಗೆ ಕೇಳಿ ಅವನಲ್ಲಿ ಅನುರಕ್ತಳಾಗಿದ್ದೆ. ಯಾವ ಜನ್ಮದ ಪುಣ್ಯವೋ ಅಪ್ಪ ದ್ರುಪದನ ಆಸೆಯೂ ಅದೇ ಆಗಿತ್ತು. ಅದಕ್ಕೇ ಅರ್ಜುನನು ಮಾತ್ರ ಭೇದಿಸಲು ಬರುವಂತ ಸ್ಪರ್ಧೆ ಸ್ವಯಂವರಕ್ಕಿಟ್ಟಿದ್ದು. ಆ ಸಮಯದಲ್ಲಿ ಪಾಂಡವರು ಅರಗಿನ ಮನೆಯಲ್ಲಿ
ಸುಟ್ಟುಹೋದರೆಂಬ ಗಾಳಿ ಸುದ್ದಿ ಇದ್ದರೂ, ಯಾರೂ ಅದನ್ನು ಸಂಪೂರ್ಣವಾಗಿ ನಂಬಿರಲಿಲ್ಲ. ಹಾಗಾಗಿಯೇ ನನ್ನಪ್ಪ ಅಷ್ಟೊಂದು ವಿಶ್ವಾಸದಿಂದ ನನ್ನ ಸ್ವಯಂವರವನೇರ್ಪಡಿಸಿದ್ದು.
ಒಂದು ವೇಳೆ ಮಧ್ಯಮ ಪಾಂಡವ ಬದುಕಿಲ್ಲದಿದ್ದರೂ, ಅವನಷ್ಟೇ ಶೂರನಾದವನು ನನ್ನನ್ನು ವರಿಸಬೇಕೆಂಬುದು ಅಪ್ಪನ ಆಸೆಯಾಗಿತ್ತು. ಎಲ್ಲ ಅಪ್ಪಂದಿರು ಹಾಗೆಯೇ ಅಲ್ಲವೇ? ಮಗಳಿಗೆ ಅತ್ಯುತ್ತಮವಾದದ್ದನ್ನೇ ಬಯಸುತ್ತಾರೆ. ಆದರೆ ಕೆಲವೇ ಕೆಲವರು ಅದು ಮಗಳಿಗೆ ಸಂತಸ ತರುವುದೇ ಎಂದು ಯೋಚಿಸುತ್ತಾರೆ. ಸೌಭಾಗ್ಯವಶಾತ್, ನನ್ನಪ್ಪ ಬಯಸಿದ್ದೂ, ನಾನು ಬಯಸಿದ್ದೂ ಒಂದೇ ಆದ್ದರಿಂದ ಆ ದಂದ್ವಕ್ಕೆ ಅವಕಾಶವಿರಲಿಲ್ಲ ಇಲ್ಲಿ. 

ಅರ್ಜುನ ಬಂದ. ಲೀಲಾಜಾಲವಾಗಿ ಸ್ವಯಂವರ ಗೆದ್ದ. ಬ್ರಾಹ್ಮಣ ವೇಷದಲ್ಲಿದ್ದ ಅವನು ಕೋಪಗೊಂಡ ರಾಜರೊಡನೆ ಕಾದಬೇಕಾಯಿತು. ಭೀಮನೂ, ಅರ್ಜುನನೂ ನನಗಾಗಿ ಕಾದಾಡಿದ್ದೂ ಆಯಿತು, ಗೆದ್ದದ್ದೂ ಆಯಿತು. ನನ್ನ ಕೈ ಹಿಡಿದು ಅರ್ಜುನನು ಮನೆಗೆ ಕರೆದುಕೊಂಡು ಹೋದದ್ದೂ ಆಯಿತು. ಅವನ ನೋಟ, ಸ್ಪರ್ಶ ಮತ್ತು ಸಾನಿಧ್ಯ ಕೂಗಿ ಹೇಳಿತ್ತು, ಇವನು ನನ್ನ ಮನದನ್ನ ಅರ್ಜುನನೇ ಸರಿ ಎಂದು. 

ಬಾಳು ಬಂಗಾರವಾಯಿತು ಎಂದುಕೊಂಡಷ್ಟರಲ್ಲಿ, ಹೊಸಿಲಲ್ಲಿ ಸ್ವಾಗತಿಸಿದ್ದು, ಆರತಿ- ಆದರಗಳಲ್ಲ, ಬದಲಾಗಿ ವಿಚಿತ್ರವೆನಿಸುವ ನನ್ನ ಭವಿಷ್ಯ  ಎಂದೇ ಹೇಳಬಹುದು. ಇಂದಿನ ಗಳಿಕೆಯನ್ನು ತಂದಿದ್ದೇವೆ ಎಂದು ಯಮಸುತನು ನುಡಿದಾಗ, ಅತ್ತೆ ಕುಂತಿ ಹೇಳಿದ್ದು, "ಎಲ್ಲರೂ ಸಮನಾಗಿ
ಹಂಚಿಕೊಳ್ಳಿ" ಎಂದು. ಒಮ್ಮೊಮ್ಮೆ ಅನಿಸುವುದು, ನನ್ನನು ಬರಿಯ ಗಳಿಕೆಯಾಗಿ ಕಾಣದೇ, ಮನುಷ್ಯಳಾಗಿ ಕಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ. ನೇರವಾಗಿ,  "ನನ್ನ ತಮ್ಮ, ನಿನ್ನ ಸೊಸೆಯೊಂದಿಗೆ ಬಂದಿದ್ದಾನೆ" ಎಂದು ಹೇಳಿದ್ದರೆ, ನನ್ನ ಜೀವನ ಹೀಗಿರುತ್ತಿರಲಿಲ್ಲವೇನೋ? ಹಾಗೆಂದ ಮಾತ್ರಕ್ಕೆ ನನ್ನ ಜೀವನದಲ್ಲೇನೋ ಕೊರತೆಯಿದೆಯೆಂಬುದಲ್ಲ. ಬಹುಶಃ ಯುಧಿಷ್ಠಿರನಿಗೆ ನಾನು ಧನ್ಯವಾದ ಹೇಳಬೇಕು, ಹೀಗೊಂದು ಅಪರೂಪವಾದ ಜೀವನವನ್ನು ನನ್ನಂಗಳಕ್ಕೆ ಕರೆತಂದಿದ್ದಕ್ಕೆ. ಆದರೆ ಆ ಕ್ಷಣದಲ್ಲೊಮ್ಮೆ ಆತಂಕವಾಗಿತ್ತು ನನಗೆ.

ಕುಂತಿಯೂ, ಅಣ್ಣ-ತಮ್ಮಂದಿರೂ ಚರ್ಚೆ ನಡೆಸಿದ್ದರು ಒಬ್ಬ ಹೆಣ್ಣು ಐದು ಗಂಡಸರನ್ನು ಏಕಕಾಲಕ್ಕೆ ಮದುವೆಯಾಗುವುದರ ಸರಿ - ತಪ್ಪುಗಳ ಬಗ್ಗೆ. ಸುಮ್ಮನೆ ತಲೆಯೆತ್ತಿ ನೋಡಿದೆ, ಒಬ್ಬರಾದ ಮೇಲೆ ಒಬ್ಬರ ಕಡೆಗೆ. ಎಲ್ಲರೂ ನನ್ನ ಅಂದದ ಆರಾಧಕರಾಗಿದ್ದರು ಎಂಬುದರಲ್ಲಿ ಸಂಶಯವಿರಲಿಲ್ಲ ನನಗೆ. ಎಲ್ಲರೂ ಸುಮುಖರೂ, ಸಧೃಡರೂ ಆಗಿದ್ದರು. ಅವರೇ ಪಾಂಡವರೆಂಬುದೂ ಅಷ್ಟರಲ್ಲಿ ನನಗೆ ಮನವರಿಕೆಯಾಗಿತ್ತು. ಅವರ ಧರ್ಮಭೀರುತ್ವವನ್ನು ಕೇಳಿ ಅರಿತಿದ್ದ ನನಗೆ ಜೀವನ ಇವರೊಟ್ಟಿಗೆ ಕಷ್ಟವಾಗಲಾರದು ಎಂದೆನಿಸಿತು. 

ಸಮಾಜದ ಅಳತೆಗಳಿಗಿಂತ ತುಸು ಭಿನ್ನವಾದ ಹಾದಿಗಳಲ್ಲಿ ನಡೆಯುವುದು ಕೌತುಕವೆಯಿಸಿತ್ತು ನನಗೆ. ನಿಜವಾಗಿಯೂ, ಈ ವಿವಾಹ ಆಕರ್ಷಣೀಯವೆನಿಸಿತ್ತು. ಬೇಡವಾದದ್ದನ್ನು ಖಂಡಿತವಾಗಿ ಬೇಡವೆನ್ನುವ ನಾನು ಸುಮ್ಮನಾಗಿದ್ದೇ ಆ ಕಾರಣಕ್ಕಾಗಿ. ಎಷ್ಟೋ ಸಾರಿ ಲಿಂಗ - ವಯಸ್ಸಿನ ಮೇರೆಯಿಲ್ಲದೆ ಧ್ವನಿ ಏರಿಸಿದ್ದಿದೆ ನಾನು, ಹಾಗೆ ಮಾಡುವುದು ಅಗತ್ಯವಿದೆಯೆಂದೆನಿಸಿದಾಗ.  ಈ ಬಾರಿಯೇಕೋ ಪ್ರತಿಭಟನೆಗಿಂತ ಅನುಸರಣೆ ಹೆಚ್ಚು ಆಸಕ್ತಿ ಹುಟ್ಟಿಸಿತ್ತು. ಹಿರಿಯರು ಗೆರೆ ಹಾಕಿದರೆ ದಾಟದ ಬಡಪಾಯಿ ಹೆಣ್ಣಾದೆ, ಕುರುಕುಲದ ಸೊಸೆಯಾದೆ. ಪಾಂಡವರ ಪಟ್ಟಮಹಿಷಿಯಾದೆ!

ನನಗೈವರೂ ಇಷ್ಟ. ನನಗರಿವಾಗಿದೆ, ಮೊಗೆ- ಮೊಗೆದು ಕೊಡುವಷ್ಟು ಪ್ರೀತಿ ಇದೆ ನನ್ನ ಬಳಿ, ಯಾರಿಗೂ ಅಸಮಾಧಾನವಾಗದ ರೀತಿಯಲ್ಲಿ. 

ಅಸಲಿಗೆ ರಾಮನೂ - ಸೀತೆಯೂ ಹೇಗೆ ಆದರ್ಶವಾಗುತ್ತಾರೆ? ಹಾಗೆಂದು ನಾನು ಯೋಚಿಸುವುದಿದೆ. ಎಲ್ಲರೂ ಅವರವರ ಶಕ್ತ್ಯಾನುಸಾರ ಪ್ರೀತಿಸಬೇಕು, ಪ್ರೀತಿಸದವರೊಡನೆ ಜೀವಿಸಬೇಕು. ಎಲ್ಲರೂ ಹಲವು ಮದುವೆಯಾಗಬೇಕೆಂದಲ್ಲ, ಆದರೆ ಅದು ಅವರವರಿಗೆ ಬಿಟ್ಟದ್ದಲ್ಲವೇ? ಒಬ್ಬ ರಾಮನಿಗೆ ಒಬ್ಬ ಸೀತೆಯನ್ನು ಮಾತ್ರ ಪ್ರಣಯಿಸಲು ಸಾಧ್ಯವಾಯಿತೆಂದರೆ ಅದು ಆದರ್ಶವಾಗುವುದು ಹೇಗೆ? ಪ್ರಣಯ ಪ್ರೀತಿಯನ್ನು ನಿರ್ಬಂಧಿಸುವುದು ಶ್ರೇಷ್ಠವಾಗುವುದು ಹೇಗೆ? ಪ್ರೇಮ- ಪ್ರೀತಿಯೇನು ಹೊನ್ನು - ಮಣ್ಣಿನ ಹಾಗೆಯೇ, ಯಾರಾದರೊಬ್ಬರ ಹೆಸರಿಗೆ ಬರೆದುಕೊಡಲು? ಅರ್ಥವಾಗುವುದಿಲ್ಲ ನನಗೆ.

ಮದುವೆಯ ಮುಂಚೆ ಅರ್ಜುನನ್ನು ಮಾತ್ರ ನಾನು ಮೋಹಿಸಿದ್ದರೂ, ಈಗ ಪಂಚ- ಪಾಂಡವರೆಲ್ಲರೂ ನನ್ನ ಪಂಚ- ಪ್ರಾಣವಿದ್ದಂತೆ. ಜೀವನ ಸನ್ನಿವೇಶಗಳು ನನ್ನಲ್ಲಿ ಪ್ರೀತಿಸುವ, ಮೋಹಿಸುವ ಮತ್ತು ಕಾಮಿಸುವ ಶಕ್ತಿ ಕೊಟ್ಟಿದೆ. ತಪ್ಪೇನು ಇದರಲ್ಲಿ? ಆಶ್ಚರ್ಯದ ಸಂಗತಿ ಒಂದಿದೆ ಇದರಲ್ಲಿ. ಈ ವಿವಾಹಕ್ಕೆ ದೊಡ್ಡವರು ಒಪ್ಪಿದರು ಎನ್ನುವುದಕ್ಕಿಂತ ಇದನ್ನು ಅವರೇ ಸಾಧ್ಯವಾಗಿಸಿದರು ಎಂದರೇ ಹೆಚ್ಚು ಸರಿಯಾದೀತು. ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿಸುವ ಮುನ್ನ ಕಠಿಣವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ನನ್ನಪ್ಪ, ವ್ಯಾಸ ಮಹರ್ಷಿಗಳೊಟ್ಟಿಗೆ ನಡೆಸಿದ ಏಕಾಂತ ಸಂವಾದದ ನಂತರ ಖುಷಿಯಿಂದ ಆಶೀರ್ವದಿಸಿ ಕಲ್ಯಾಣ ನಡೆಸಿಕೊಟ್ಟ. 

ಇಂದಿನವರೆಗೆ ಆ ಮಾತುಕತೆಯಲ್ಲಿ ಏನು ನಡೆದಿತ್ತೆಂಬುದರ ಸ್ಪಷ್ಟ ಅರಿವು ನನಗಿಲ್ಲದಿದ್ದರೂ, ನನ್ನ ಮದುವೆ ಯಾವುದೋ ರಾಜತಂತ್ರದ ಭಾಗವಾಗಿಯೋ, ಅಥವಾ ಯಾವುದೇ ನಂಬಿಕೆಯ ಭಾಗವಾಗಿಯೇ ಆಗಿದೆ ಎಂದು ವ್ಯಾಸ ಮಹರ್ಷಿಗಳು ಸೂಚಿಸಿದ್ದಾಗಿರಬಹುದು ಎಂದು ನನಗೆ ಗೊತ್ತಿದೆ. ನನ್ನನ್ನು ಕಾಡುವ ಪ್ರಶ್ನೆಯೇನೆಂದರೆ, ಆ ಸ್ವಯಂವರದ ಬದಲಾಗಿ, ಅತ್ತೆಯ ಮಾತುಗಳಿಂದ ಹೊರತಾಗಿ, ನಾನು ಈ ಪಾಂಡವರನ್ನು ಯಾವುದೋ ಕಾಡಿನಲ್ಲಿಯೋ, ಹಳ್ಳಿಯಲ್ಲಿಯೋ ಕಂಡು, ಐವರಲ್ಲಿಯೂ ಅನುರಕ್ತಳಾಗಿದ್ದರೆ ಪರಿಸ್ಥಿತಿ ಹೇಗಿರುತ್ತೆಂಬುದು! ನನ್ನ ಮದುವೆಯ ಸಮಯದಲ್ಲಿ ಹೀಗೆ ಹಲವು ಪತಿಗಳ ಹೊಂದಿದ ಋಷಿಸತಿಗಳ ಬಗ್ಗೆ ಉಲ್ಲೇಖವಾಗಿದ್ದರೂ, ಆ ವಿವಾಹಗಳ ಸನ್ನಿವೇಶ ಸ್ಪಷ್ಟವಿರಲಿಲ್ಲ. ಈ ಪದ್ಧತಿ ಜನಸಾಮಾನ್ಯರ ಅರಿವಿನಲ್ಲಂತೂ ಇರುವುದಲ್ಲ. ಅಂದ ಮೇಲೆ, ಈಗ ಮಹಾಪತಿವ್ರತೆಯಲ್ಲೊಬ್ಬಳು ನಾನು ಎಂದು ಕೊಂಡಾಡುವ ಜನರು ಆಗ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಎರಡನೆಯ ಮಾತಿಲ್ಲದೇ, ಜಾರಿಣಿ ಎಂದು ಕರೆದಿರುತ್ತಿದ್ದರು. ಎಂತಹ ವಿಪರ್ಯಾಸವಲ್ಲವೇ!

ಪ್ರೀತಿಯೆಂದು ನಾನು ವ್ಯಕ್ತಪಡಿಸಿದರೆ ಅಶ್ಲೀಲ, ಅವರು ಹೇರಿದರೆ ಧರ್ಮ. 

ಭೀಮನು ಈಗಾಗಲೇ ಹಿಡಿಂಬೆಯನ್ನು ಮದುವೆಯಾಗಿ ಘಟೋತ್ಕಚನನ್ನು ಪಡೆದಿದ್ದಾನೆ. ಮತ್ತುಳಿದ ನಾಲ್ವರೂ ಬೇರೆ ವಿವಾಹಗಳಾಗಬಹುದು. ಅದರಲ್ಲೂ ವೀರನೂ, ರಸಿಕನೂ ಆದ ಅರ್ಜುನನು ಇನ್ನೆಷ್ಟು ಮದುವೆಗಳನ್ನು ಮಾಡಿಕೊಳ್ಳಲಿದ್ದಾನೆಯೋ? ಸೋಜಿಗವೆಂದರೆ ಜಗತ್ತಿಗೆ ಇವು ನನ್ನ ಮದುವೆಯಷ್ಟು ಸೋಜಿಗವಲ್ಲ. ಏಕಿರಬಹುದು?

ಹೆಣ್ಣು ಭಾವನಾಜೀವಿ. ನಿಜ ಹೇಳಬೇಕೆಂದರೆ ಅಕ್ಷಯವಾಗಿ ಪ್ರೀತಿಸುವ ಸಾಮರ್ಥ್ಯ ಹೆಣ್ಣಿಗಲ್ಲವೇ ಹೆಚ್ಚು? ಆದರೂ ಬಹುಪತ್ನಿತ್ವ ಹೇಗೆ ರೂಢಿಯಾಗಿ ಬೆಳೆದು ಬಂದಿದೆ? ನನಗನಿಸುವುದು ಹೀಗೆ, ಭಾವನೆಗಳಿಗೂ ಈ ವ್ಯವಸ್ಥೆಗೂ ಸಂಬಂಧವಿಲ್ಲ. ಸಂಬಂಧವಿರುವುದು ವಾರಸುದಾರತನ ಮತ್ತು ವ್ಯವಸ್ಥೆಯ ನಡುವೆ. ಹೆಣ್ಣು ಏಕಕಾಲಕ್ಕೆ ಇಬ್ಬರೊಂದಿಗೆ ಸಂಸಾರ ನಡಿಸಿದರೆ, ಗರ್ಭ ಯಾರದ್ದು ಎಂಬ ಪ್ರಶ್ನೆಗೆ ಉತ್ತರ ಕಷ್ಟ. ಮಕ್ಕಳ ತಂದೆ ಯಾರು, ಯಾರ ಆಸ್ತಿಗೆ ಯಾರು ಹಕ್ಕುದಾರರು ಎಂದು ನಿರ್ಧರಿಸುವುದು ಕಠಿಣ. ಪುರುಷಪ್ರಧಾನವಾದ ಈ ವ್ಯವಸ್ಥೆಯಲ್ಲಿ ತಂದೆಯ ಹೆಸರಿಗೆ ಬೆಲೆ ಹೆಚ್ಚು. ಸಮಾಜದಲ್ಲಿ ಸಂಕೀರ್ಣತೆ ಹೆಚ್ಚಿದಂತೆ ಭಾವನೆಗಳ ಜಾಗದಲ್ಲಿ, ಅನುಕೂಲಗಳು ಮನ್ನಣೆ ಪಡೆಯುತ್ತವೆ. ಹಾಗಾಗಿಯೇ ಮದುವೆ ಹಲವರಿಗೆ ಅನುಕೂಲತೆಯ ಪ್ರಶ್ನೆ. ಬಹುಪತ್ನಿತ್ವವೂ ಹೀಗೆ ಪುರುಷಪ್ರಧಾನ ಸಮಾಜದ ಆನುಕೂಲ್ಯದ ಕೂಸು. 

ಮನುಷ್ಯನ ಬದುಕಿನ ಸಂಕೀರ್ಣತೆಗಳು ಹೆಚ್ಚಿ, ಮತ್ತೊಬ್ಬರ ಸರಿ ತಪ್ಪುಗಳ ವಿಮರ್ಶಿಸಲು ಜನ ಸಮಯವಿಲ್ಲದೆ, ವ್ಯಕ್ತಿಗಳು ಸ್ವಾತಂತ್ರ್ಯ ಪಡೆಯುವ ದಿನಗಳು ಬರುವುದೇ ಮುಂದೆ? ಹಾಗೆಂದು ಆಶಿಸಬಹುದೇ ನಾನು? ಧರ್ಮ, ಸಮಾಜದ ಸಮ್ಮತಕ್ಕಿಂತ ಭಾವನೆಗಳ ನೈಜತ್ವದ ಅಡಿಪಾಯವಾಗಿ ಪರಿಗಣಿಸಲ್ಪಡುವ ದಿನಗಳು ಬರಬಹುದೇ ಮುಂದೆ? ಕೆಲವಾದರೂ ಹೆಣ್ಣು ಜೀವಗಳು ಆ ಬದುಕು ಬಾಳುವ ದಿನಗಳು ಬರಲಿವೆಯೇ? ಎಂತಹ ಕನಸುಗಾರ್ತಿ ನಾನು! 

ಅರ್ಧನಾರಿಈಶ್ವನಲ್ಲೊಂದು ಪ್ರಾರ್ಥನೆ. ನನ್ನ ಭಾವಗಳು ಬದುಕಿನ ಹಳಿಯಾದಂತೆ ಎಲ್ಲರ ಭಾವಗಳೂ ಅವರವರ ಜೀವನ ಸೂತ್ರವಾಗಲಿ!

-ನಿಷಾದ

ಫೋಟೋ ಕೃಪೆ :https://www.dailyo.in/arts/draupadi-veerappa-moily-mahabharata-poetry/story/1/17206.html 

Comments

  1. ಚಿಕ್ಕಂದಿನಲ್ಲಿ ಬಹುಪತ್ನಿತ್ವದ ಹಲವು ನೈಜ ಕಥೆಗಳನ್ನು ಕೇಳಿ ಬಹು ಪತಿತ್ವದ ಸಾಧ್ಯತೆಯ ಕುರಿತಾಗಿ ಮಾತನಾಡಿ ‌
    ಹಿರಿಯರೇಂದೆನಿಸಿ ಕೊಂಡವರು ಬಳಿ ಉಗಿಸಿ ಕೊಂಡಿದ್ದಿದೆ. ಅವರವರ ಭಾವಕ್ಕೆ ಬದುಕುವ,‌ ತೀರ್ಮಾನಿಸುವ, ಭಾವಗಳ ವ್ಯಕ್ತಪಡಿಸುವ ಹಕ್ಕು ಗಂಡಿಗೆ ಆದಿಕಾಲದಿಂದಲೂ ಇದೆ. ಮಹಾಭಾರತ ಬರೆದಿದ್ದು ಸಹ ಒಂದು ಗಂಡಸೇ. ದ್ರೌಪದಿಯ ಕಥೆ ಒಂದು ಹೆಣ್ಣು ಬರೆದಿದ್ದರೆ ಇವತ್ತಿಗೆ ಮಹಾಭಾರತವು ಇರುತ್ತಿರಲಿಲ್ಲವೇನೊ.

    ದ್ರೌಪದಿಯ ಮನಸ್ಸಿನ ಒಳಗನ್ನಡಿ ಹಿಡಿದ ಈ ಲೇಖನ,‌ ಬಹುಶಃ ಪ್ರತಿ ಹೆಣ್ಣಿನ ಮನದಾಳದ ತುಮುಲಗಳಿಗೆ ಕನ್ನಡಿಯಂತಿದೆ.

    ReplyDelete
    Replies
    1. ನೀವು ಹೇಳಿದ್ದು ನಿಜ. ತುಂಬಾ ಧನ್ಯವಾದಗಳು!

      Delete

Post a Comment

Popular Posts